ಮರಮರಕೂ ಮಂಜಿನ ಹೊದಿಕೆ ಮರಗಟ್ಟಿದೆ ಪ್ರೀತಿ
ಎಲೆಯೆಲೆಯಲೂ ಹಿಮದ ಬಿಂದು ಎಲೆ ನೀನು ಯಾರೆ?
ಹೊಳೆಯುತ್ತಿದೆ ಹೊಳೆ ಮೇಲೆ ಉದಯರವಿ ಕಿರಣ
ಉಷೆಗೆ ಕಾವು ನೀಡಲೆಂದೇ ಅಗೋ ಬಂದ ಅರುಣ.
ಶುರುವಾಯಿತು ಚಳಿಗಾಲ, ಕಿರಿದಾಯಿತು ಹಗಲು
ವಿರಹಿಗಳಿಗೆ ಹಗಲಿರುಳೂ ವೈಶಾಖದ ದಿಗಿಲು
ಹಕ್ಕಿಗಳಿಗೆ ಗೂಡಿನೊಳಗೆ ಬೆಚ್ಚನೆ ಸವಿನಿದ್ರೆ
ನನಗೋ ಸವಿಗನಸಿನ ಸುಖ ಕನಸಲಿ ಅವಳಿದ್ರೆ
ಬೇಸಗೆಗೆ ಕಾಯುತ್ತಿದೆ ಮನ ಯಮುನಾ ತೀರ
ಶಿಶಿರನನ್ನು ಹಿಂದಿಕ್ಕುತ್ತಾ ಬಾ ವಸಂತ ಬಾರಾ
ಯಾರೋ ಅದು ಅಲ್ಲೆಲ್ಲೋ ಹಾಡುತಿರುವ ಹಾಡು
ಪ್ರೇಮಿಗಳಿಗೆ ಕೇಳಿಸಿದರೂ ಮುಗಿಯದು ಈ ಪಾಡು
ಆಕಾಶದ ತುಂಬೆಲ್ಲ ಬಿಳಿಮೋಡದ ಹಿಂಡು
ಮನಸು ಹಿಗ್ಗಿ ಹಾರುತ್ತಿದೆ ತಿಳಿಮೋಡವ ಕಂಡು
ನಾಳೆಗಾಗಿ ಕಾಯುತ್ತಿದೆ ಇಂದಿನ ಕಿರು ಆಶೆ
ಅವಳು ಬಂದೇ ಬರುವಳು ಕೊಟ್ಟಿಹಳು ಭಾಷೆ.
ಕಾಲಚಕ್ರ ಉರುಳುತ್ತಿದೆ ಹಾದಿ ರಕ್ತಸಿಕ್ತ
ಗುಡಿಯ ಮುಂದೆ ಕೈಮುಗಿದಿಹ ದೇವರ ವರಭಕ್ತ
ಬೆಚ್ಚಗಿರಲಿ ಮೈ ಮನಸು ಕರುಣಿಸು ಈ ವರವ
ಕೊಡು ನನಗೆ ಎಲ್ಲವನ್ನೂ ಗ್ರಹಿಸುವಂಥ ಅರಿವ
ಕವಿತೆಯ ಪ್ರತಿಚರಣದಲ್ಲೂ ಸಲ್ಲಾಪದ ಸೊಗಡು
ತುಂಬಿಕೊಂಡು ಅನುರಣಿಸಲಿ ಹರೆಯದಂಥ ಬೆಡಗು
ಬಳಿಗೆ ಬರಲಿ ಎಲ್ಲೋ ಕಂಡು ಮನವ ಸೆಳೆದ ಚೆಲುವೆ
ಚಳಿಗಾಲವು ಕಹಿಯಲ್ಲ, ಅದು ದೇವರ ಒಲವೆ.
Subscribe to:
Post Comments (Atom)
No comments:
Post a Comment